Tuesday 5 January 2010

ಸುಂದರ ಬ್ರಹ್ಮೆ - 2009

 ೨೦೦೮ರಿಂದ ೨೦೦೯ರವರೆಗೆ ಬಹಳಷ್ಟು ಬದಲಾವಣೆಗಳಾದವು. ಇದು ಕನಸೋ ನೆನೆಸೋ ಎಂದು ಯೋಚಿಸುವಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿತ್ತು. ಗೋವಾದ ಗುಂಗಿನಲ್ಲಿ ಬೆಂಗಳೂರಿಗೆ ಹಿಂದಿರುಗಿದ ನಾನು ಮತ್ತೆ ನನ್ನದೇ ಆದ ಲೋಕವೊಂದನ್ನು ಹುಟ್ಟು ಹಾಕಿ ಅದರೊಳಗೆ ಹಾಯಾಗಿ ಕಳೆದು ಹೋಗಿದ್ದೆ.

ಒಂದೆಡೆ ಕೆಲಸ ತನ್ನ ಪಾಡಿಗೆ ಉತ್ಸಾಹದಲಿ ಸಾಗುತಿತ್ತು, ಮತ್ತೊಂದೆಡೆ ಮನೆಯಲ್ಲಿ ಮದುವೆ ವಿಷಯ ಬಂದಾಗಲೆಲ್ಲಾ ಮನಸ್ತಾಪ, ನನ್ನಿಂದ ಮನೆಯವರೆಲ್ಲರ ಸಂತೋಷವೇ ಹಾರಿ ಹೋಗಿತ್ತು. ಏನೇ ಪ್ರಯತ್ನ ಪಟ್ಟರು ನನ್ನಿಂದ ಸರಿ ಪಡಿಸಲಾಗದ ಪರಿಸರ ಮನೆಯಲ್ಲಿ ಉಂಟಾಗಿತ್ತು. ಇದನ್ನು ಬರೆಯಬೇಕೋ ಬೇಡವೋ ಎಂದು ಬಹಳ ಯೋಚಿಸಿ ಕೊನೆಗೆ ಇದು ನಾನು ಬಂದ ಹಾದಿ, ಇದು ಸತ್ಯ, ಈ ಕಹಿ ಘಟನೆಗಳು ಮುಂದೆ ಸಿಹಿಯಾಗಬಹುದೆಂಬ ಕಿಂಚ್ಚಿತು ನಂಬಿಕೆ ಇಲ್ಲದ ನಾನು ಹಾಗು ನನ್ನ ಮನೆಯವರು ೨೦೦೯ರ ಪರಿವರ್ತನೆ ನೋಡಿ ಅಚ್ಚರಿಗೊಂಡೆವು.

ಜನವರಿ ಹೇಗೆ ಕಳೆಯಿತೋ ತಿಳಿಯಲಿಲ್ಲಾ, ಆದರೆ ಫೆಬ್ರವರಿ ತಿಂಗಳಿಗೆ ನಾನು ಉಂಗುರುವನ್ನು ಬಿಚ್ಚಿಟ್ಟು ಒಂದು ವರ್ಷವಾಗಿತ್ತು.ಮನಸಿನ ಗೊಂದಲಗಳ ನಡುವೆ ಒಂದೇ ಒಂದು ಸಿಹಿ ನೆನಪೆಂದರೆ ನನ್ನ ಪ್ರೀತಿಯ Pinti ಯಾ ನಗು- ಅವನಿಗಿಂಥಾ ಆತ್ಮೀಯವಾದ ಬಂಧ ಬೇರೊಂದಿಲ್ಲ. Pinti ಗೆ ಜೈ !

ಸುಮಾರು ಐದು ವರ್ಷಗಳಿಂದ ನಾನು AOL ನ ಇನ್ಸ್ಟಂಟ್ ಮೆಸ್ಸೆಂಜರ್  ಬಳಸುತ್ತಿದ್ದೆ , ಆದರೆ ಆಕಸ್ಮಿಕವಾಗಿ ಎಲ್ಲಿಂದಲೋ ಒಂದು ಬರಹ ಬಂದು ನನಗಿಂತ ಹೆಚ್ಚಾಗಿ ನನ್ನ ತಂದೆ, ತಾಯಿ ಮತ್ತು ತಂಗಿಯ ಬಗ್ಗೆ ಯೋಚನೆ ಮಾಡುವ ಹಾಗೆ ಮಾಡಿತು. ಆ ನಾಲ್ಕು ಸಾಲಿನಲ್ಲಿದ್ದ ಗೌರವ,ಪ್ರೀತಿ ಆ ವ್ಯಕ್ತಿಯ ಬಗ್ಗೆ ಯೋಚಿಸುವ ಹಾಗೆ ಮಾಡಿ - ಆಹಾ ಇದ್ದರೆ ಹೀಗೆ ಇರಬೇಕು ಎಂದು ಅನಿಸಿತು.

ತಮಾಷೆಯಾಗಿ ಆರಂಭವಾದ ಆ ಸಂಪರ್ಕ ಧೀರ್ಘವಾಗಿ ಅವಳ ಮೇಲೆ ಪ್ರೀತಿಯನ್ನು ಉಂಟುಮಾಡಿತ್ತು.ಆ ಪ್ರಶ್ನೆಗಳ ಸುರಿಮಳೆಯನ್ನು ಉತ್ತರಿಸಿ ನಿಶ್ಚಿಂತೆಯಿಂದ ನಾಲ್ಕಾರು ದಿನ ಕಾಲ ಕಳೆದೆ. ಮನೆಯಲ್ಲಿ ಅಮ್ಮ ಅಪ್ಪನಿಗೆ ಅವಳ ಬಗ್ಗೆ ಹೇಳಿದೆ - ಅವರ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲಾ. ನನ್ನ ತಂಗಿ ಭಾವನಿಗೆ ಕೂಡ ತುಂಬಾ ಕುಶಿಯಾಯಿತು. ಅಪ್ಪನ ಆದೇಶದಂತೆ ಅವಳನ್ನು ಮನೆಗೆ ಕರೆತಂದೆ.

ಆ ದಿನ ಎಂದು ಮರೆಯಲಾಗದ ಅನುಭವ, ಧಾರಾಕಾರವಾಗಿ ಸುರಿದು ಬಂದ ಮಳೆ, ಹೇಗಿರುವಳೋ ನಮ್ಮ ಮನೆಗೆ ಬರುವ ಹುಡುಗಿ ಎಂಬ ಮನೆಯವರ ಕಾತುರ. ನನ್ನ ಹಿಂದೆ ಗಾಡಿಯ ಮೇಲೆ ಕುಳಿತಿದ್ದ ಅವಳ ಹೃದಯದ ಬಡಿತ ನನಗೆ ಕೇಳಿಸುತಿತ್ತು.ಬಲಗಾಲಿಟ್ಟು ಮನೆಗೆ ಬಂದ ಅವಳನ್ನು ನೋಡಿದ ಕೂಡಲೇ ಮನೆಯವರೆಲ್ಲಾ ಒಂದೇ ಕ್ಷಣದಲ್ಲೇ ನಮ್ಮನ್ನು ಹರಸಿದರು.

ಅದಾದಮೇಲೆ ಆಗಸ್ಟ್ನಲ್ಲಿ ನಿಶ್ಚಿತಾರ್ಥ - ನಂತರ ಸುಂದರ ಪಯಣ.ಇಲ್ಲಿಯವರೆಗೆ ಬರೆದದ್ದು ನನ್ನ ವಯಕ್ತಿಕ ಜೀವನದಲ್ಲಿ ನಡೆದ ಘಟನೆಗಳು.

ಈ ಮದ್ಯೆ ಕೆಲವು ಕಹಿ ಘಟನೆಗಳು ಕೂಡ ನಡೆದವು.ನಮ್ಮ ಸರಸ್ವತಿ ಅತ್ತೆ ಮಾರ್ಚ್ ತಿಂಗಳಲ್ಲಿ ತೀರಿ ಕೊಂಡರು.ಕಿರಣ್ ಭಾವನ ತಂದೆ (ಮಾವ) ಡಿಸೆಂಬರ್ನಲ್ಲಿ ತೀರಿ ಕೊಂಡರು.


ದೇವರ ದಯೆಯಿಂದ ಮನೆಯವರೆಲ್ಲರ ಆರೋಗ್ಯ ಸುಖ ಸ್ತಿತಿಯಲ್ಲಿತ್ತು. Pinti ಬಹಳಷ್ಟು ಸುಧಾರಿಸಿದ್ದಾನೆ.

೨೦೦೯ರಲ್ಲಿ ನಾ ಕಂಡ ಊರುಗಳು:
- ಚಿಕ್ಕಮಗಳೂರು woodway ಎಸ್ಟೇಟ್
- ಶಿರಡಿ
- ಜೋಗ ಜಲಪಾತ  
- ಮುರುಡೇಶ್ವರ  
- ಗೋಕರ್ಣ
- ಕೊಡಚಾದ್ರಿಯ ನಿಸರ್ಗಧಾಮ  
- ಕಾಕಾ ಬೇ - ಕೊಡಗು

೨೦೧೦ ದೇವರ ಆಶಿರ್ವಾದದಿಂದ ಚೆನ್ನಾಗಿರಲೆಂದು ಆಶಿಸುತ್ತ ಮತ್ತೆ ಇನ್ನೊಂದು ಸುಂದರ ಬ್ರಹ್ಮೆಯ ವಿಸ್ಮಯ ಲೋಕದ ಹುಡುಕಾಟದಲ್ಲಿ ಹೊರಟಿದ್ದಾನೆ ವಿಶ್ವನಾಥ...